ಶನಿವಾರ, ಜನವರಿ 8, 2011

ಅಕ್ಕಂದಿರಿಗೆ ಪಚ್ಚೆಯಿಡುವ ದ್ರಾವಿಡ ಆಚರಣೆ :

ಮನುಷ್ಯರನ್ನು ಭೂತಗಳು ಕ್ಷುದ್ರದೇವತೆಗಳು ಕಾಡಿ ಹಿಂಸಿಸುವುದು ಜನಪದರಲ್ಲಿ ಸಾಮಾನ್ಯ, ಅಂತಹ ಕ್ಷುದ್ರದೇವತೆಗಳಿಗೆ ಮನುಷ್ಯರು ಬೇರೆ ಬೇರೆ ಹೆಸರುಗಳಿಂದ ಕರೆಯುವರು. ಅಗ್ಗರ್ಲು. ಅಗ್ಗಾರ್ಲು, ಅಗ್ಗಾರು, ಮುಂತಾದ ಹೆಸರುಗಳಿಂದ ಕರೆಯುವರು. ಈ ಅಗ್ಗಾರ್ಲು ಎನ್ನುವುದು 'ಅಕ್ಕಗಾರು' ಎಂಬುದರ ಜಾನಪದ ರೂಪ. ತೆಲುಗಿನಲ್ಲಿ ಅಕ್ಕಗಾರು ಎಂದರೆ ಅಕ್ಕನವರು ಎಂದು. ಹಾಗಾದರೆ ಆ ಅಕ್ಕನವರಾರು? ಎಂಬ ಪ್ರಶ್ನೆ ಮೂಡುತ್ತದೆ. ಸಪ್ತ ಮಾತೃಕೆಯರನ್ನು ಏಳು ಜನ ಅಕ್ಕನವರೆಂದು ಕರೆಯುವರು. ಅಲ್ಲದೆ ಇವರನ್ನು ಜಕ್ಕಿಣಿಯರೆಂದು ಕರೆಯುವರು. ಪ್ರತಿ ಗ್ರಾಮದ ಹೊರಭಾಗದಲ್ಲಿ ನೇರಳೆ. ಮಾವು, ಆಲ ಮತ್ತು ಬೇವಿನ ಗುಂಡು ತೋಪುಗಳಲ್ಲಿ ಈ ಅಕ್ಕನವರು ನೆಲೆಸಿರುತ್ತವೆಂದು ಜನ ಭಾವಿಸುತ್ತಾರೆ. ಅಂತಹ ಸ್ಥಳಗಳಲ್ಲಿ ಜನ ಸಂಚಾರ ಕಡಿಮೆಯಿರುತ್ತದೆ. ಅಲ್ಲಿಗೆ ಯಾರೂ ಹೋಗುವುದಿಲ್ಲ.

ಇಂತಹ ಸ್ಥಳಗಳಲ್ಲಿ ಸಮಯವಲ್ಲದ ಸಮಯದಲ್ಲಿ ಓಡಾಡಿದಾಗ ಅಕ್ಕಗಾರು ಗಾಳಿ ಸೋಕಿದರೆ ವ್ಯಕ್ತಿಯು ಅಸ್ವಸ್ಥನಾಗುವನು. ಅಗ್ಗಾರ್ಲುವಿನಲ್ಲಿ ಎರಡು ವಿಧವಿರುತ್ತದೆ. ಒಂದು ಅಗ್ಗಾರ್ಲು ಮತ್ತೊಂದು ಮುನೇಶ್ವರ. ಇವು ಸಾಮಾನ್ಯವಾಗಿ ನಡು ಮಧ್ಯಾಹ್ನದ ಹೊತ್ತಿನಲ್ಲಿ ಆಗಸದಲ್ಲಿ ಓಡಾಡುತ್ತವೆಂದು, ಏಕಾಂಗಿಯಾಗಿ ಓಡಾಡುವವರನ್ನು, ತಮಗೆ ಬೇಕಾದವರನ್ನು ಹಿಡಿದು ಹಿಂಸಿಸುತ್ತವೆಂದು ನಂಬಿಕೆ. ಇವೆರಡನ್ನು ಕ್ಷುದ್ರದೇವತೆಗಳ ಗುಂಪಿನಲ್ಲಿ ಗುರ್ತಿಸಲಾಗುತ್ತದೆ.
ತೀವ್ರತರವಾದ ಜ್ವರವು. ಕೈಕಾಲುನೋವು, ಕಣ್ಣುರಿ, ವಾಂತೀ ಭೇದಿ ಕಾಣಿಸಿಕೊಳ್ಳುವುದು. ಯಾವುದೇ ಔಷಧಿಗೂ ಅದು ವಾಸಿಯಾಗುವುದಿಲ್ಲ. ಆಗ ತಿಳಿದಿರುವವರು ಅಗ್ಗಾರ್ಲು ಸೋಕಿರಬಹುದು ಆಯಮ್ಮನಿಗೆ 'ಮೀದು' ಕಟ್ಟಿಯೆಂದು ಹೇಳುವರು.

ಮುಗ್ಧವಾದ ಮದುವೆಯಾಗದ ಹುಡುಗನನ್ನು ಕರೆಯುವರು. ಅವನಿಗೆ ಮೂರು ಪ್ರಕಾರದ ದಾನ್ಯಗಳನ್ನು, ಒಂದು ಅರಿಶಿನದ ಕೊಂಬನ್ನು, ಒಂದು ತಂಬಿಗೆಯನ್ನು ಊದುಬತ್ತಿಯನ್ನು ಕೊಟ್ಟು ಹತ್ತಿರದ ಬಾವಿಗೋ ಆಥವಾ ಕುಂಟೆಯ ಹತ್ತಿರ ಕಳಿಸುವರು. ಅವನು ಆ ಬಾವಿ ಅಥವಾ ಕುಂಟೆಯಲ್ಲಿ ಕೈಕಾಲು ಮುಖ ತೊಳೆದುಕೊಳ್ಳುವನು. ತಂಬಿಗೆಯನ್ನು ತೊಳೆಯುವನು. ಆ ತಂಬಿಗೆಯ ತುಂಬಾ ನೀರನು ತೆಗೆದುಕೊಳ್ಳುವನು. ಅಲ್ಲೆ ಕಲ್ಲಿನ ಮೇಲೆ ಅರಿಶಿನವನ್ನು ಉಜ್ಜಿ ಗಂಧ ತೆಗೆದು ಒಂದು ಬಿಳಿ ಬಟ್ಟೆಯನ್ನು ಹಳದಿಗೊಳಿಸುವನು. ಅದರಲ್ಲಿ ಮೂರು ಪ್ರಕಾರದ ದಾನ್ಯಗಳನ್ನು ಹಾಕಿಕಟ್ಟುವನು. ಅದನ್ನು ತಂಬಿಗೆಯ ಬಾಯಿಗೆ ಕಟ್ಟಿ ಊದುಬತ್ತಿ ಉರಿಸಿ ಪೂಜಿಸುವನು. ಅವರ ಮನೆದೇವರಿಗೆ, ಅಕ್ಕನರನ್ನು ಕುರಿತು ಪೂಜಿಸುವನು. ಹರಕೆಯನ್ನು ಹೊತ್ತುಕೊಳ್ಳುವನು. ಅಲ್ಲಿಂದ ಯಾರನ್ನೂ ಮಾತನಾಡದೆ ನೇರವಾಗಿ ಮನೆಗೆ ಬರುವನು. ರೋಗಿಯು ಹೆಂಗಸಾಗಿದ್ದರೆ ಎಡಗೈಗೂ, ಗಂಡಸಾಗಿದ್ದರೆ ಬಲಗೈಗೂ ಆ ಮೀದನ್ನು ಆಕಾಶ ಭೂಮಿಗೂ ನೀವಳಿಸಿ ಕಟ್ಟುವನು. ಆ ತಂಬಿಗೆಯಲ್ಲಿನ ನೀರನ್ನು ಮೂರು ಸಾರಿ ಕುಡಿಸುವನು, ನಿಜವಾದ ಅಕ್ಕನವರಾಗಿದ್ದರೇ ಆ ಮೀದು ಕೆಂಪು ಬಣ್ಣಕ್ಕೆ ಬರುತ್ತದೆ. ಆ ಮೀದಿನ ಕೆಂಪು ಬಣ್ಣವನ್ನನುಸರಿಸಿ ಅಕ್ಕನವರ ತೀವ್ರತೆಯನ್ನು ಜನ ನಂಬುತ್ತಿದ್ದರು.

ಒಂದು ವೇಳೆ ರೋಗಿಯು ಗುಣಮುಖನಾಗದಿದ್ದರೆ ಹತ್ತಿರದ ಕೊರವಂಜಿಯನ್ನು 'ಸಗಿಣ' (ಕಣಿ)ಕೇಳಲು ಭೇಟಿಯಾಗುತ್ತಿದ್ದರು. ಇಲ್ಲವೆ ಸಂತೆಯಲ್ಲಿ ಕೊರವಂಜಿಯ ಹತ್ತಿರ 'ಗೆದ್ದಿ' ಕೇಳುತ್ತಿದ್ದರು. ಆ ಕೊರವಂಜಿ ಧಾನ್ಯಗಳನ್ನು ಮುಟ್ಟಿ ರಾಗಬದ್ಧವಾಗಿ ಇಂತಹ ದಿಕ್ಕಿನಲ್ಲೇ ಇಂತಹ ಸಮಯದಲ್ಲೇ ಎಂದು ತಿಳಿಸುವಳು. ಅಲ್ಲದೆ ಪೀಡಿಸುತ್ತಿರುವದು ಅಕ್ಕನವರೇ, ಜಕ್ಕಿಣಿಯೇ ಭೂತ-ಪ್ರೇತವೇ, ಅದು ಎಂತಹ ಅಕ್ಕನವರು ಎಂಬುದನ್ನು ತಿಳಿಸುತ್ತಾಳೆ. ಅಲ್ಲದೆ ಪರಿಹಾರವನ್ನು ಹೇಳುತ್ತಾಳೆ.
ಅಕ್ಕಗಾರು ಹಿಡಿದಿದ್ದರೆ ಎರಡು ಕಾಲಿನ ಪ್ರಾಣಿಯನ್ನು ಬಲಿ ನೀಡುವಂತೆಯೂ ಮುನೇಶ್ವರನು ಹಿಡಿದಿದ್ದರೆ ನಾಲ್ಕು ಕಾಲಿನ ಪ್ರಾಣಿಯನ್ನು 'ಪಚ್ಚೆಯಿಟ್ಟು' ಬಲಿ ನೀಡಬೇಕೆಂದು ತಿಳಿಸುತ್ತಾಳೆ. ಅಲ್ಲದೆ ಯಾವ ವಾರ, ಯಾವ ಸ್ಥಳದಲ್ಲಿ ಹಚ್ಚೆಯಿಡಬೇಕು ಎಂಬುದನ್ನು ತಿಳಿಸುತ್ತಾಳೆ.

ಅಕ್ಕಗಾರು ಅಂದರೇ ಕುಂಬಾರನು ಮಾಡಿರುವ ಅಲಂಕಾರಮಯ ಕುದುರೆಗಳನ್ನು ಇಂತಹ ಗುಂಡು ತೋಪುಗಳಲ್ಲಿ ಪ್ರತಿಷ್ಠಾಪಿಸಿ ಪೂಜೆ ಮಾಡಲ್ಪಟ್ಟಿರುತ್ತದೆ. ಅಂತಹ ಕಡೆ ರೋಗಿಯು ಕೊರವಂಜಿ ಹೇಳಿದ ದಿನದಂದು ಹೋಗಿ ಹಚ್ಚೆ ಸಾಮಾನುಗಳೊಂದಿಗೆ ಹೆಡಿಗೆಯನ್ನು ಹೊತ್ತು ತರುವ ವಾಡಿಕೆಯಿದೆ. ಅಲ್ಲದೆ ಕೈಯಾರೆ ಅಮದನ್ನು ಮತ್ತು ಅಮದಿನ ಎಲೆಯನ್ನು ತಯಾರಿಸಿ ಆಕೆಯನ್ನು ಪೂಜಿಸಿ ಬಲಿ ನೀಡಿ ಬರುವರು.

ರೋಗಿ ಮತ್ತು ಜೊತೆಗೊಬ್ಬರು ನಡೆಸುವ ಪೂಜಾ ಕಾರ್ಯ ಮತ್ತೊಂದಿದೆ. ಕೆಲವರು ಹೊಳೆ ಅಥವಾ ಕುಂಟೆಯ ರೇವಿನಲ್ಲಿ ಈ ದ್ಯಾವರನ್ನು ಮಾಡುತ್ತಾರೆ. 'ಓವಿಳಾಕು'(ಎಕ್ಕಲಸೊಪ್ಪು)ವಿನಿಂದ ಚಪ್ಪರ ಹಾಕಿ, ಗುಡಿಗಟ್ಟಿ ಅದರಲ್ಲಿ ಏಳು ಕಲ್ಲುಗಳನ್ನಿಡುವರು. ಅಲ್ಲಿಗೆ ಪಚ್ಚೆ ಸಾಮಾನುಗಳನ್ನೂ ದವಸ ಧಾನ್ಯಗಳನ್ನೂ ಹೆಡಿಗೆಯಲ್ಲಿ ತೆಗೆದುಕೊಂಡು ಹೋಗಿರುತ್ತಾರೆ. ಅಲ್ಲಿಯೇ ಒಲೆಯಿಟ್ಟು 'ಅಮದನ್ನ'(ನೈವೇಧ್ಯ) ಮಾಡಿ. ಪಚ್ಚೆ ಸಾಮಾನುಗಳಿಂದ ದೇವರನ್ನು ಪೂಜಿಸುವರು. ಏಳು ನಿಂಬೆ ಹಣ್ಣುಗಳನ್ನು, ಗಾಜೂ, ಓಲೆಗರಿಯನ್ನಿಟ್ಟು ಕೋಳಿಯನ್ನು ಕೊಯ್ಯುವರು. ಅದರ ರಕ್ತವನ್ನು ಅಮದಿನ್ನಕ್ಕೆ ಸುರಿದು ದ್ಯಾವರಿಗೆ ನಮಸ್ಕರಿಸಿ ಮನೆಗೆ ಬರುವರು. ಅನಂತರ ಕಾಯಿಲೆ ವಾಸಿಯಾಗುವುದು. ಒಂದು ವೇಳೆ ಈ ರೀತಿ ಮಾಡದಿದ್ದರೆ ವ್ಯಕ್ತಿಯು ಕ್ಷೀಣಿಸುತ್ತಾ ಒಂದು ದಿನ ಸಾಯುತ್ತಾನೆ ಎಂಬುದು ಜನರ ನಂಬಿಕೆ..
ಈ ಮೇಲಿನ ಆಚರಣೆಯು ಅಪ್ಪಟ ದ್ರಾವಿಡ ಸಂಸ್ಕೃತಿಯ ಮಾತೃದೇವತಾ ಆರಾಧನೆಯ ಪಳಿಯುಳಿಕೆಯಂತೆ ಇಂದಿಗೂ ಆಚರಣೆಯಲ್ಲಿದೆ
- ಜಿ.ಶ್ರೀನಿವಾಸಯ್ಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ